ಶ್ರದ್ಧಾ ಜ್ಞಾನಂ ದದಾತಿ
"ಶ್ರದ್ಧಾ ಜ್ಞಾನಂ ದದಾತಿ"ಅಂದರೆ,ಶ್ರದ್ಧೆ ಜ್ಞಾನವನ್ನು ಕೊಡುತ್ತದೆ.ನಿಜ..
ಜ್ಞಾನ ಬೇಕೆಂದರೆ ಶ್ರದ್ಧೆ ಹಾಗೂ ಏಕಾಗ್ರತೆ ಇರಲೇಬೇಕು."ಶ್ರದ್ಧಾವಾನ್ ಲಭತೇ ಜ್ಞಾನಮ್"ಶ್ರದ್ಧಾವಂತರು ಮಾತ್ರ ಜ್ಞಾನದಲ್ಲಿ ಪರಿಪೂರ್ಣತೆಯನ್ನು ಹೊಂದುತ್ತಾರೆ.
ಹಾಗೇ ಜ್ಞಾನದ ಮೂಲಕ ಪರಮಶಾಂತಿಯನ್ನು ಗಳಿಸುತ್ತಾರೆ."ಜ್ಞಾನಂ ಲಬ್ಧ್ವಾ ಪರಾಶಾಂತಿಂ ಅಚಿರೇಣಾಧಿಗಚ್ಛತಿ"ಪ್ರಪಂಚದಲ್ಲಿರುವ ಸಕಲ ಚರಾಚರಗಳ ಅಸ್ತಿತ್ವವಿರುವುದು ಶ್ರದ್ಧೆಯಲ್ಲೇ.ಋಗ್ವೇದದ ಶ್ರದ್ಧಾಸೂಕ್ತ ಶ್ರದ್ಧೆಯ ಮಹತ್ವವನ್ನು ಸುಂದರವಾಗಿ ತಿಳಿಸುತ್ತದೆ. ಪಂಚಭೂತಗಳ ಇರುವಿಕೆಯಿರುವುದು ಶ್ರದ್ಧೆಯಲ್ಲೇ,"ಶ್ರದ್ಧಯಾಗ್ನಿಃ ಸಮಿಧ್ಯತೇ ಶ್ರದ್ಧಯಾ ವಿಂದತೇ ಹವಿಃ" ಅಗ್ನಿ ಉರಿಯುವುದು ಶ್ರದ್ಧೆಯಿಂದ.ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದು ಶ್ರದ್ಧೆಯಿಂದ,ಸೂರ್ಯ,ಚಂದ್ರರು ಬೆಳಕನ್ನು ನೀಡುವುದು ಶ್ರದ್ಧೆಯಿಂದ.ಆಗಸ ಮಳೆ ಸುರಿಸುವುದು ಶ್ರದ್ಧೆಯಿಂದ.ದಾನ-ಧರ್ಮಗಳನ್ನು ಮಾಡಬೇಕಾದ್ದೂ ಶ್ರದ್ಧೆಯಿಂದ.ಯಾರು ಪರಿಪೂರ್ಣ ಶ್ರದ್ಧೆಯಿಂದ ತನ್ನ ಕಾರ್ಯವನ್ನು ಮಾಡುತ್ತಾರೋ ಅಂತವರಿಗೆ ಕಾರ್ಯಫಲ ಸಿದ್ಧಿಯಾಗುತ್ತದೆ.
ಜ್ಞಾನ ಸುಲಭವಾಗಿ ಗಳಿಸುವಂತದ್ದಲ್ಲ.ಹಣದಿಂದ ಖರೀದಿಸಲು ಸಾಧ್ಯವಾಗುವಂತದ್ದಲ್ಲ.ಜ್ಞಾನವನ್ನು ಗಳಿಸಬೇಕೆಂದರೆ ಒಬ್ಬ ಯೋಗ್ಯ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು."ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ".ಶ್ರದ್ಧೆಯಿಂದ ಗುರುವಿಗೆ ನಮಸ್ಕರಿಸುತ್ತಾ,ವಿಧೇಯಪೂರ್ವಕವಾಗಿ ಪ್ರಶ್ನೆಗಳನ್ನು ಕೇಳುತ್ತಾ,ಗುರುಗಳ ಸೇವೆ ಮಾಡುತ್ತಾ ಜ್ಞಾನವನ್ನು ಗಳಿಸಬೇಕು.ವಿಧೇಯತೆಯಲ್ಲಿ,ಪ್ರಶ್ನೆಯಲ್ಲಿ,ಸೇವೆಯಲ್ಲಿ ಇರಬೇಕಾದ್ದು ಕೇವಲ ಶ್ರದ್ಧೆ.ಶ್ರದ್ಧೆಯಿಲ್ಲದೇ ಜ್ಞಾನಪ್ರಾಪ್ತಿ ಸಾಧ್ಯವಾಗಲಾರದು.
ಇಂದು ಅಧ್ಯಯನವೆಂಬುದು ಕೇವಲ ಉದ್ಯೋಗಕ್ಕೆ ಹಾಗೂ ಧನಾರ್ಜನೆಗೆ ಎಂಬಂತಹ ಕಾಲ ಬಂದೊದಗಿದೆ.ಬಾಹ್ಯ ಆಕರ್ಷಣೆಗಳಿಂದ ಅಧ್ಯಯನದಲ್ಲಿ ಶ್ರದ್ಧೆ ಕಡಿಮೆಯಾಗಿದೆ.ಗುರು-ಶಿಷ್ಯರ ಅನುಬಂಧವೂ ಕ್ಷೀಣಿಸಿದೆ.ಶಿಕ್ಷಣ,ವಿದ್ಯೆಗಳನ್ನು ಕೇವಲ ವ್ಯವಹಾರದೃಷ್ಟಿಯಲ್ಲೇ ನೋಡಲಾಗುತ್ತಿದೆ.ವಿದ್ಯಾರ್ಥಿಗಳಲ್ಲೂ ಶ್ರದ್ಧೆ ಹಾಗೂ ಏಕಾಗ್ರತೆಯ ಕೊರತೆಯೆದ್ದು ಕಾಣಿಸುತ್ತಿದೆ.
ವಿದ್ಯಾರ್ಥಿಜೀವನ ಬದುಕಿನ ಪ್ರಮುಖ ಘಟ್ಟ.ಅದನ್ನು ವ್ಯರ್ಥ ಮಾಡಿಕೊಂಡರೆ ಬಾಳನ್ನೇ ವ್ಯರ್ಥ ಮಾಡಿಕೊಂಡಂತೇ.ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯೆಯನ್ನು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಕಲಿಯಬೇಕು.
ವಿದ್ಯೆಯಿಂದಲೇ ಮನುಷ್ಯನಿಗೆ ಅಮೃತತ್ವ ಸಿಗುತ್ತದೆಯೆಂಬುದನ್ನು ಮರೆಯಬಾರದು."ವಿದ್ಯಯಾ ಅಮೃತಮಶ್ನುತೇ"
ಲೋಕಾಃ ಸಮಸ್ತಾಃ ಸುಖಿನೋ ಭವಂತು..
Comments
Post a Comment